ಸೌಂದರ್ಯ ಜಗದೀಶ್ ನಿರ್ಮಾಣದ ಅದ್ದೂರಿ ಸಿನಿಮಾ ರಾಮ್ಲೀಲಾ. ಈ ಚಿತ್ರದ ನಾಯಕ ಚಿರಂಜೀವಿ ಸರ್ಜಾರ ಸಹೋದರ ಧ್ರುವಸರ್ಜಾ ಹುಟ್ಟು ಹಬ್ಬದ ಸಂಭ್ರಮದಲ್ಲಿಯೇ ಧ್ವನಿಸುರುಳಿಯನ್ನೂ ಬಿಡುಗಡೆ ಮಾಡಲಾಗಿದೆ. ‘ತೇರಿ ಬ್ಯೂಟಿಫುಲ್ ಆಂಕೆ ಎಂಬ ಹಾಡನ್ನು ಪುನೀತ್ ರಾಜ್ಕುಮಾರ್ ಹಾಡಿರುವುದು ವಿಶೇಷ. ಈ ಧ್ವನಿಸುರುಳಿಯನ್ನು ದೃವ ಸರ್ಜಾ ಬಿಡುಗಡೆ ಮಾಡಿದ್ದಾರೆ.
ಈ ಹಾಡನ್ನು ಪುನೀತ್ ಹಾಡಿದ್ದಾರೆ ಎಂಬುದರಿಂದ ಮೊದಲ್ಗೊಂಡು ನಾನಾ ವಿಶೇಷತೆಗಳಿವೆ. ಈ ಹಾಡಿನ ಬಗ್ಗೆ ಭಾರೀ ತಲೆಕೆಡಿಸಿಕೊಂಡು ಕೆಲಸ ಮಾಡಿರುವ ಚಿತ್ರತಂಡ ಜಾರ್ಜಿಯಾ ದೇಶದ ರಾಜಧಾನಿ ಟಿಬಿಲಿಸಿ ಹಾಗೂ ಸುತ್ತಲ ಸುಂದರ ವಾತಾವರಣದಲ್ಲಿ ಚಿತ್ರೀಕರಣ ನಡೆಸಿದೆ. ಚಿತ್ರದ ನಿರ್ದೇಶಕ ವಿಜಯ್ ಕಿರಣ್ ಹಾಗೂ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಈ ಹಾಡನ್ನು ಅದ್ಭುತವಾಗಿ ಮೂಡಿ ಬರುವಂತೆ ಮಾಡಿದ್ದಾರೆ.
ಒಂದೇ ಫಾರ್ಮ್ನಲ್ಲಿ ನಾಯಕ ಚಿರಂಜೀವಿ ಸರ್ಜಾರನ್ನು ಹನ್ನೆರಡು ಗೆಟಪ್ಗಳಲ್ಲಿ ತೋರಿಸಿ ನೃತ್ಯ ಮಾಡಿಸಿರುವುದು ಮತ್ತೊಂದು ವಿಶೇಷ. ಇಂಥಾ ಅದ್ದೂರಿ ಹಾಡಿಗೆ ಪರಿಣಾಮಕಾರಿಯಾಗಿ ಕ್ಯಾಮೆರಾ ಕಣ್ಣಾಗಿರುವವರು ಭರಣಿ ಕೆ. ಧರಣ್. ಇದು ಕನ್ನಡ ಚಿತ್ರರಂಗದಲ್ಲಿಯೇ ಮೊದಲ ಪ್ರಯತ್ನ ಎಂಬುದು ಚಿತ್ರತಂಡದ ಅಂಬೋಣ. ಇಡೀ ಚಿತ್ರ ತಂಡ ಟಿಬಿಸಿಲಿಯ ವಾತಾವರಣಕ್ಕೆ ಹೊಂದಿಕೊಳಲು ಪ್ರಯಾಸಪಟ್ಟರೂ ನಾಯಕ ನಾಯಕಿಯ ಸಹಕಾರದೊಂದಿಗೆ ನಿರಂತರವಾಗಿ ಐದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆಯಂತೆ.
ನಿರ್ಮಾಪಕ ಸೌಂದರ್ಯ ಜಗದೀಶ್ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಪ್ರೀತಿಯಿಂದಲೇ ಮಾಡಿದ್ದಾರೆ. ಹೊಸದನ್ನು ಕೊಡಬೇಕೆಂಬ ಹಂಬಲ ಹೊಂದಿರುವ ನಿರ್ಮಾಪಕರು ಹೆಜ್ಜೆ ಹೆಜ್ಜೆಗೂ ಸಹಕಾರ ನೀಡಿದ್ದಾರೆಂಬ ಮೆಚ್ಚುಗೆ ಚಿತ್ರ ತಂಡದ್ದು.
ಇನ್ನು ಈ ಹಾಡಿನ ರೆಕಾರ್ಡಿಂಗ್ ವೇಳೆಯಲ್ಲಿ ಪುನೀತ್ ಹಾಡುವ ಸಂದರ್ಭದಲ್ಲಿ ಖುದ್ದು ರಾಘಣ್ಣ ಹಾಡಿನ ಅರ್ಥ ಬಿಡಿಸಿ ಹೇಳಿದ್ದರು. ಪುನೀತ್ ಭಾವ ತುಂಬಿ ಹಾಡಿದ್ದರಂತೆ. ಸಂಗೀತ ನಿರ್ದೇಶಕ ಅನೂಪ್ ರೂಬಿನ್ಸ್ ಹಾಗೂ ಗೀತ ಸಾಹಿತಿ ಸುದರ್ಶನ್ರ ಕೈಚಳಕದೊಂದಿಗೆ ಈ ಹಾಡು ಮೂಡಿ ಬಂದಿದೆ.
ರೆಕಾರ್ಡಿಂಗಿನ ಕೊನೆಯಲ್ಲಿ ರಾಘಣ್ಣ ‘ಈ ಹಾಡು ಈ ವರ್ಷದ ಹಿಟ್ ಸಾಂಗ್ ಅಂತ ಭವಿಷ್ಯ ನುಡಿದಿರೋದು ಚಿತ್ರ ತಂಡದ ಹುರುಪು ಹೆಚ್ಚಿಸಿದೆ. ಬಹುತಾರಾಗಣದ, ಅದ್ದೂರಿ ವೆಚ್ಚರ ರಾಮ್ಲೀಲಾ ಆದಷ್ಟು ಬೇಗನೆ ತೆರೆಗೆ ಬರಲಿದೆ.